ನ್ಯಾಕ್ ನಿಂದ ಮಾನ್ಯತೆ ನೀಡುವ ಪ್ರಕ್ರಿಯೆಗಳಲ್ಲಿನ ಸುಧಾರಣೆಗಳು ಕುರಿತು ಪ್ರಾದೇಶಿಕ ಕಾರ್ಯಾಗಾರ

Kalabandhu Editor
5 Min Read

ಬೆಂಗಳೂರಿನ ಐಐಎಸ್‌ಸಿ ಸಹಯೋಗದಲ್ಲಿ ಯಶಸ್ವಿ ಕಾರ್ಯಾಗಾರ

ದಕ್ಷಿಣ ರಾಜ್ಯಗಳ ವಿಶ್ವವಿದ್ಯಾಲಯಗಳ ಕುಲಪತಿಗಳು ಸೇರಿ 800ಕ್ಕೂ ಅಧಿಕ ತಜ್ಞರು ಭಾಗಿ

ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡುವ ಕುರಿತು
ನ್ಯಾಕ್ ಮಾನ್ಯತೆಯಲ್ಲಿ ಎರಡು ಹಂತದ ಸುಧಾರಣೆ

ಇನ್ನು ನ್ಯಾಕ್ ಮಾನ್ಯತೆ ಪಡೆಯುವುದು ಸುಲಭ ಹಾಗೂ ಕಡಿಮೆ ಸಮಯ ಮತ್ತು ಶುಲ್ಕ ವ್ಯಯ

ಮಾನ್ಯತೆ ಪಡೆಯಲು ಮುಂದೆ ಬರುವ ಸಂಸ್ಥೆಗಳಿಗೆ ಎಲ್ಲಾ ಬಗೆಯ ನೆರವು

ಉನ್ನತ ಶಿಕ್ಷಣದಲ್ಲಿ ಗುಣಮಟ್ಟ ಕಾಯ್ದುಕೊಳ್ಳುವುದು ನೂತನ ರಾಷ್ಟ್ರೀಯ ಶಿಕ್ಷಣ ನೀತಿ 2020ಯ ಒಂದು ಪ್ರಮುಖ ಆಯಾಮವಾಗಿದೆ. ಗುಣಮಟ್ಟದ ಶಿಕ್ಷಣದಲ್ಲಿ ಮಹತ್ವದ ಸುಧಾರಣೆಗಳನ್ನು ಕೈಗೊಳ್ಳಲು ಮಾನ್ಯತೆಯಲ್ಲಿ ಪರಿವರ್ತನಕಾರಿ ಸುಧಾರಣೆಗಳನ್ನು ತರಲು ಡಾ.ರಾಧಾಕೃಷ್ಣನ್‌ ಸಮಿತಿ ಹಲವು ಶಿಫಾರಸುಗಳನ್ನು ಮಾಡಿತ್ತು, ಅವುಗಳನ್ನು ಭಾರತ ಸರ್ಕಾರದ ಉನ್ನತ ಶಿಕ್ಷಣ ಸಚಿವಾಲಯ ಅನುಮೋದಿಸಿ, ಕೆಲವು ಪ್ರಮುಖ ಶಿಫಾರಸುಗಳನ್ನು ಮಾಡಿತ್ತು. ಆ ಶಿಫಾರಸುಗಳನ್ನು ಆಧರಿಸಿ, ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತೆ ಮಂಡಳಿ (ಎನ್‌ಎಎಸಿ-ನ್ಯಾಕ್)ಯ ಆಡಳಿತ ಮಂಡಳಿ ಎರಡು ಹಂತಗಳಲ್ಲಿ ಸುಧಾರಣೆಗಳನ್ನು ಕೈಗೊಳ್ಳಲು ಉದ್ದೇಶಿಸಿದೆ, ಅವುಗಳೆಂದರೆ ಬೈನರಿ ಮಾನ್ಯತೆ (ಬೈನರಿ ಅಕ್ರಿಡಿಷನ್) ಮತ್ತು ಮೆಚ್ಯುರಿಟಿ ಬೇಸ್ಡ್‌ ಗ್ರೇಡೆಡ್‌ ಲೆವೆಲ್‌).
ಹೊಸ ಮಾನ್ಯತಾ ಪದ್ದತಿಗೆ ಶಿಫಾರಸು ಮಾಡಲು ಉನ್ನತ ಮಟ್ಟದ ಸಮಿತಿ ಮತ್ತು ಶಿಸ್ತು ಸಮಿತಿಗಳನ್ನು ರಚಿಸಲಾಗಿತ್ತು, ಅವು ಸಂಬಂಧಿಸಿದ ಪಾಲುದಾರರೊಡನೆ ಅಂದಾಜು 40 ಸಭೆಗಳನ್ನು ನಡೆಸಿ ಬೈನರಿ ಮಾನ್ಯತೆ ಕುರಿತಂತೆ ಅಗತ್ಯ ಕೈಪೀಡಿ ಮತ್ತು ಸಂಬಂಧಿಸಿದ ಪ್ರಕ್ರಿಯೆಯನ್ನು ನಡೆಸಲು ಅಂತಿಮಗೊಳಿಸಿತು. ಮುಂದಿನ ದಿನಗಳಲ್ಲಿ ಆ ಬೈನರಿ ಪದ್ದತಿಯನ್ನು ಅಧಿಕೃತವಾಗಿ ಚಾಲನೆ ನೀಡುವ ಮುನ್ನ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಿಂದ ಅಧಿಕೃತ ಪ್ರತಿಕ್ರಿಯೆಯನ್ನು ಪಡೆಯಲು ನ್ಯಾಕ್ ಐದು ಪ್ರಾದೇಶಿಕ ಕಾರ್ಯಾಗಾರಗಳನ್ನು ನಡೆಸುತ್ತಿದೆ. ಅಲ್ಲದೆ, ಹೆಚ್ಚುವರಿಯಾಗಿ ನ್ಯಾಕ್‌, ಮಾನ್ಯತೆಯಲ್ಲಿ ಯೋಜಿತ ಸುಧಾರಣೆಗಳನ್ನು ತರಲು ನಾನಾ ರಾಜ್ಯಗಳ ಉನ್ನತ ಶಿಕ್ಷಣ ಇಲಾಖೆಗಳು ಮತ್ತು ಪರಿಷತ್‌ಗಳ ಜತೆ ಸಮಾಲೋಚನೆ ನಡೆಸುತ್ತಿದೆ. ಆ ಮೂಲಕ ಬಹುಪಾಲು ಸಂಸ್ಥೆಗಳನ್ನು ಹೊಸ ಮಾನ್ಯತಾ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳುವ ಪ್ರಯತ್ನ ನಡೆಸಲಾಗುತ್ತಿದೆ.
ಕಾರ್ಯಾಗಾರವನ್ನು ಉದ್ಘಾಟಿಸಿದ ಭಾರತ ಸರ್ಕಾರದ ವೃತ್ತಿಪರ ಶಿಕ್ಷಣ ಮತ್ತು ತರಬೇತಿ ರಾಷ್ಟ್ರೀಯ ಮಂಡಳಿಯ ಮಾಜಿ ಅಧ್ಯಕ್ಷ, ನಿವೃತ್ತ ಐಎಎಸ್ ಅಧಿಕಾರಿ ಡಾ.ನಿರ್ಮಲ್ಜಿತ್ ಸಿಂಗ್‌ ಕಲ್ಸಿ , ಕೌಶಲ್ಯಾಭಿವೃದ್ಧಿ ಸೇರಿದಂತೆ ಹಲವು ಅಂಶಗಳನ್ನು ಮಾನ್ಯತಾ ಚೌಕಟ್ಟಿನಲ್ಲಿ ತರುವ ಅಗತ್ಯವಿದೆ ಎಂದು ಪ್ರಮುಖವಾಗಿ ಪ್ರಸ್ತಾಪಿಸಿದರು. ಅಲ್ಲದೆ, ಅವರು ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು ಮತ್ತು ಕೌಶಲ್ಯಾಭಿವೃದ್ಧಿಗೆ ಅದರ ಪ್ರಸ್ತುತತೆ ಕುರಿತು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದವರಿಗೆ ಜಾಗೃತಿ ಮೂಡಿಸಿದರು.


ಪ್ರೊ. ಕಲ್ಸಿ ತಮ್ಮ ಭಾಷಣದಲ್ಲಿ, ಎನ್ ಇಪಿ 2020 ಆಧರಿಸಿ ನ್ಯಾಕ್ ನಲ್ಲಿ ಮಾಡಿಕೊಳ್ಳಬೇಕಾಗಿರುವ ಬದಲಾವಣೆ ಅಗತ್ಯತೆ ಬಗ್ಗೆ , ವಿಶೇಷವಾಗಿ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು ಮತ್ತು ಕೌಶಲ್ಯಾಭಿವೃದ್ಧಿ ಸಂಯೋಜಿಸುವ ಅಗತ್ಯತೆ ಕುರಿತು ಪ್ರಮುಖವಾಗಿ ಪ್ರಸ್ತಾಪಿಸಿದರು. ಮಾನವಶಾಸ್ತ್ರ ಮತ್ತು ಸಮಾಜ ವಿಜ್ಞಾನ ಸೇರಿದಂತೆ ಹಲವು ವಿಭಾಗಗಳಲ್ಲಿ ಕೌಶಲ್ಯವನ್ನು ಸಂಯೋಜಿಸುವ ಪ್ರಮುಖ ಬದಲಾವಣೆಗಳನ್ನು ಅವರು ಪ್ರಸ್ತಾಪಿಸಿದರು. ಆನ್ ಲೈನ್ ಮತ್ತು ಮಿಶ್ರ ಕಲಿಕೆಗೆ ಒತ್ತು ನೀಡುವ ಶಿಕ್ಷಣ 5,0 ಕುರಿತು ಅವರು ಒತ್ತಿ ಹೇಳಿದರು. ಸರಳತೆಯನ್ನು ಅಳವಡಿಸಿಕೊಳ್ಳುವ ಮೂಲಕ ಮಾನ್ಯತೆ ಪ್ರಕ್ರಿಯೆಯಲ್ಲಿ ಮುಂದಿನ ದಿನಗಳಲ್ಲಿ ಅಳವಡಿಸಿಕೊಳ್ಳಲಿರುವ ನಾವೀನ್ಯತೆಗಳ ಬಗ್ಗೆ ಬಲವಾಗಿ ಪ್ರತಿಪಾದಿಸಿದರು.
ನ್ಯಾಕ್ ನಿರ್ದೇಶಕ ಪ್ರೊ. ಗಣೇಸನ್ ಕನ್ನಬೀರನ್‌, ಬೈನರಿ ಅಕ್ರಡಿಷನ್ ಚೌಕಟ್ಟು (ಬಿಎಎಫ್ ) ಕುರಿತು ವಿಷಯ ಪ್ರಸ್ತುತಪಡಿಸಿದರು. ಈ ಬೈನರಿ ಚೌಕಟ್ಟನ್ನು ಡಾ. ರಾಧಾಕೃಷ್ಣನ್‌ ಸಮಿತಿ ಪ್ರಸ್ತಾಪಿಸಿದ್ದ 10 ಅಂಶಗಳಿಂದ ಆರಿಸಿಕೊಳ್ಳಲಾಗಿದೆ. ಅದನ್ನು ಮಾಹಿತಿ, ಪ್ರಕ್ರಿಯೆ ಮತ್ತು ಫಲಿತಾಂಶಗಳನ್ನು ಆಧರಿಸಿ ಉನ್ನತ ಶಿಕ್ಷಣದಲ್ಲಿ ಗುಣಮಟ್ಟವನ್ನು ಸಾಧಿಸಲು ಮತ್ತೆ ವರ್ಗೀಕರಿಸಲಾಗಿದೆ. ಉದ್ದೇಶಿತ ಚೌಕಟ್ಟಿನಲ್ಲಿ ಪ್ರಮುಖ ಬದಲಾವಣೆ ಎಂದರೆ, ರಾಷ್ಟ್ರದ ಸಾಮಾಜಿಕ ಆರ್ಥಿಕ ಅಭಿವೃದ್ಧಿ ನಿಟ್ಟಿನಲ್ಲಿ ಉನ್ನತ ಶಿಕ್ಷಣದ ಕೊಡುಗೆಯ ಮೇಲಿನ “ಫಲಿತಾಂಶ ಮತ್ತು ಅದರ ಪರಿಣಾಮ’’ ಆಗಿದೆ. ಈ ಚೌಕಟ್ಟನ್ನು ವಿಶ್ವವಿದ್ಯಾಲಯಗಳು, ಸ್ವಾಯತ್ತ ಸಂಸ್ಥೆಗಳು ಮತ್ತು ಮಾನ್ಯತೆ ಪಡೆದ ಕಾಲೇಜುಗಳಿಗೆ ಹೊಂದಿಕೆಯಾಗುವಂತೆ ಸೂಕ್ತವಾಗಿ ರೂಪಿಸಲಾಗಿದೆ. ಅಲ್ಲದೆ, ಈ ಚೌಕಟ್ಟು ನಿರ್ದಿಷ್ಠ ಪಾಲುದಾರರ ಗುಂಪಿನಲ್ಲಿ ಆಗಿರುವ ಪರಿಣಾಮಗಳಿಂದಾಗಿ ಸಂಸ್ಥೆಗಳ ವಿಭಿನ್ನತೆಯನ್ನು ಗುರುತಿಸುತ್ತದೆ. ಚೌಕಟ್ಟಿನಲ್ಲಿ ಗ್ರಾಮೀಣ ಮತ್ತು ದೇಶಾದ್ಯಂತ ಅಶೋತ್ತರ ಜಿಲ್ಲೆಗಳಲ್ಲಿ ಕೇಂದ್ರೀಕೃತವಾಗಿರುವ ದೂರದ ಸ್ಥಳಗಳ ಸಂಸ್ಥೆಗಳ ಸ್ಥಿತಿಗತಿಯನ್ನು ಒಳಗೊಂಡಿರುತ್ತದೆ.
ವಾಸ್ತವ ಸಂಗತಿ ಎಂದರೆ ಸದ್ಯದ ಸಂದರ್ಭದಲ್ಲಿ ಮಾನ್ಯತೆ ಪಡೆದ ಕಾಲೇಜುಗಳ ಪ್ರಮಾಣ ಅತಿ ಕಡಿಮೆ ಇದೆ. ಹಾಗಾಗಿ ಮಾನ್ಯತಾ ಪ್ರಕ್ರಿಯೆಯಲ್ಲಿ ಭಾಗಿಯಾಗಲು ಮುಂದೆ ಬರುವ ಎಲ್ಲಾ ಸಂಸ್ಥೆಗಳಿಗೆ ಬೆಂಬಲ ನೀಡಲು ಹಲವು ನೆರವಿನ ಉಪಕ್ರಮಗಳನ್ನು ಆರಂಭಿಸಲು ಉದ್ದೇಶಿಸಲಾಗಿದೆ. ಅಲ್ಲದೆ, ಹೆಚ್ಚುವರಿಯಾಗಿ ಹೊಸ ಮಗತ್ತು ಪರಿವರ್ತನಾತ್ಮಕ ಗುಣಮಟ್ಟದ ಚಳವಳಿಯಲ್ಲಿ ಯಾರೊಬ್ಬರೂ ಹೊರಗುಳಿಯದಂತೆ ಖಾತ್ರಿಪಡಿಸಲು ಗ್ರಾಮೀಣ ಮತ್ತು ದೂರದ ಗುಡ್ಡಗಾಡು ಪ್ರದೇಶದ ಸಂಸ್ಥೆಗಳಿಗೆ ಮಾರ್ಗದರ್ಶನ ನೆರವು ವ್ಯವಸ್ಥೆಯನ್ನು ಒದಗಿಸುವ ಸಾಧ್ಯತೆ ಇದೆ. ಹೊಸ ಚೌಕಟ್ಟು “ಸುಲಭ ರೀತಿಯಲ್ಲಿ ವ್ಯವಹಾರ ಮತ್ತು ವ್ಯವಸ್ಥೆಯಲ್ಲಿ ವಿಶ್ವಾಸ’’ ದ ಸಂಕೇತವಾಗಿದೆ ಮತ್ತು ಯಾವುದೇ ಭಯ ಅಥವಾ ವಾಸಸ್ಥಳದ ಅಂಜಿಕೆಯಿಲ್ಲದೆ ಸ್ವಯಂ ಪ್ರೇರಿತವಾಗಿ ಮಾನ್ಯತೆ ಪಡೆಯಲು ಪ್ರೇರೇಪಿಸುತ್ತದೆ.
ಉದ್ದೇಶಿತ ಚೌಕಟ್ಟು ಅತಿ ಕಡಿಮೆ ಸಮಯವನ್ನು ಮತ್ತು ಕಡಿಮೆ ಶುಲ್ಕವನ್ನು ತೆಗೆದುಕೊಳ್ಳುವ ನಿರೀಕ್ಷೆ ಇದೆ ಮತ್ತು ಅದಕ್ಕಿಂತ ಮುಖ್ಯವಾಗಿ ಮೌಲ್ಯಮಾಪನದ ಹೆಸರಿನಲ್ಲಿ ಸಂಸ್ಥೆಗಳಿಗೆ ಭೌತಿಕವಾಗಿ ಭೇಟಿ ನೀಡುವ ಅಮೂಲ್ಯ ಸಮಯವನ್ನು ಉಳಿತಾಯ ಮಾಡುತ್ತದೆ. ಬಹುತೇಕ ಗುಣಾತ್ಮಕವಾಗಿ ದತ್ತಾಂಶ ಕ್ರೂಢೀಕರಣಗೊಳ್ಳುತ್ತದೆ ಮತ್ತು ಅದು ಸಂಸ್ಥೆಗಳ ಮೌಲ್ಯಮಾಪನದ ವಸ್ತುನಿಷ್ಠತೆ ಮತ್ತು ಸತ್ಯಾಸತ್ಯತೆಯನ್ನು ಖಾತ್ರಿಪಡಿಸುತ್ತದೆ. ಉದ್ದೇಶಿತ 10ರ ಚೌಕಟ್ಟಿನೊಳಗೆ ವಿಶ್ವವಿದ್ಯಾಲಯಗಳಿಗೆ 56 ಮ್ಯಾಟ್ರಿಕ್ಸ್‌, ಸ್ವಾಯತ್ತ ಕಾಲೇಜುಗಳಿಗೆ 56 ಮತ್ತು ಅಫಿಲಿಯೇಟೆಡ್‌ ಕಾಲೇಜುಗಳಿಗೆ 46 ಸೇರಿದೆ. ಅಲ್ಲದೆ, ನ್ಯಾಕ್‌ ಕಾನೂನು, ಆರೋಗ್ಯ ವಿಜ್ಞಾನಗಳು ಮತ್ತು ಮ್ಯಾನೇಜ್‌ ಮೆಂಟ್‌ ಇತ್ಯಾದಿ ಸೇರಿದಂತೆ ಹಲವು ವಿಭಾಗಗಳಿಗೆ ನಿರ್ದಿಷ್ಟ ಕೈಪೀಡಿಗಳನ್ನು ಸಿದ್ಧಪಡಿಸಿದ್ದು, ಆ ಮೂಲಕ ಪ್ರತಿಯೊಂದು ವಿಭಾಗಗಳಿಗೂ ನಿರ್ದಿಷ್ಠ ಅಗತ್ಯತೆಗಳನ್ನು ಪೂರೈಸಲಾಗುತ್ತಿದೆ.
ನ್ಯಾಕ್ ನ ಸಲಹೆಗಾರ ಡಾ.ದೇವೇಂಧ್ರ ಕೌಡೆ ಅಳತೆಯ ಮಾನದಂಡಗಳು ಪ್ರತಿಯೊಂದು ಮೆಟ್ರಿಕ್ಸ್‌ ಬಗ್ಗೆ ವಿಸ್ತೃತವಾಗಿ ವಿವರಿಸಿದರು ಮತ್ತು ಹೊಸ ಮ್ಯಾಟ್ರಿಕ್ಸ್‌ ಮತ್ತು ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ಉನ್ನತ ಶಿಕ್ಷಣದಲ್ಲಿ ಗುಣಮಟ್ಟ ಕಾಯ್ದುಕೊಳ್ಳುವ ಅಗತ್ಯತೆ ಅಂಶಗಳನ್ನು ಸೇರ್ಪಡೆ ಮಾಡಲಾಗಿದೆ ಎಂದರು.
ಪ್ರಾದೇಶಿಕ ದಕ್ಷಿಣ ವಿಭಾಗದ ಐದು ಕಾರ್ಯಗಾರಗಳ ಪೈಕಿ ಮೊದಲನೆಯ ಕಾರ್ಯಾಗಾರವನ್ನು 2024ರ ಜುಲೈ 16ರಂದು ಬೆಂಗಳೂರಿನಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಲಾಗಿತ್ತು. ದಕ್ಷಿಣದ ಎಲ್ಲಾ ರಾಜ್ಯಗಳು ಉಪ ಕುಲಪತಿಗಳು, ಪ್ರಾಂಶುಪಾಲರು, ಗುಣಮಟ್ಟ ಖಾತ್ರಿ ಕೋಶದ ಸಮನ್ವಯಕಾರರು, ಬೋಧನಾ ವರ್ಗ ಸೇರಿ ಸುಮಾರು 800 ಶೈಕ್ಷಣಿಕ ತಜ್ಷರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ಮತ್ತೆ ನಾಲ್ಕು ಕಾರ್ಯಾಗಾರಗಳನ್ನು 2024ರ ಜುಲೈನಲ್ಲಿ ಭುವನೇಶ್ವರ್‌, ಗುವಾಹಟಿ, ಲಕ್ನೋ ಮತ್ತು ಆಹಮದಾಬಾದ್ ಗಳಲ್ಲಿ ನಡೆಸಲು ಉದ್ದೇಶಿಸಲಾಗಿದೆ.

Share this Article