ವಿಕಸಿತ ಸಂಕಲ್ಪ ಯಾತ್ರೆಯಲ್ಲಿ ಸಶಕ್ತೀಕರಣದ ಮಹತ್ವ ಸಾರಿದ ಅಂಚೆ ಇಲಾಖೆ

Kalabandhu Editor
3 Min Read

ಗ್ರಾಮೀಣ ಮತ್ತು ನಗರ ಪ್ರದೇಶಗಳ ನಡುವಿನ ಸಂಪರ್ಕ ಕೊಂಡಿಯಾಗಿ ದೇಶಾದ್ಯಂತ ಹಿಂದುಳಿದ ಪ್ರದೇಶಗಳೂ ಸೇರಿದಂತೆ ದುರ್ಗಮ ಪ್ರದೇಶಗಳ ಜನರಿಗೆ ಸಂಪರ್ಕ ಮಾಹಿತಿ ಮಾಧ್ಯಮವಾಗಿರುವ ಅಂಚೆ ಇಲಾಖೆ ತಂತ್ರಜ್ಞಾನ ಬದಲಾದಂತೆ ಹೊಸ ಸೇವೆಗಳನ್ನು ನಾಗರಿಕರಿಗೆ ಒದಗಿಸಿ ಜನಜೀವನದಲ್ಲಿ ಮಹತ್ವದ ಪಾತ್ರವನ್ನು ನಿರ್ವಹಿಸುತ್ತಿದೆ. ಭಾರತದ ಪ್ರಗತಿಯ ಪ್ರಯಾಣವನ್ನು ಚಿತ್ರಿಸುವ ವಿಕಸಿತ ಸಂಕಲ್ಪ ಯಾತ್ರೆಯಲ್ಲಿ ಕರ್ನಾಟಕ ಅಂಚೆ ಇಲಾಖೆಯು ಸಕ್ರಿಯವಾಗಿ ಪಾಲ್ಗೊಂಡು ಸರಕಾರದ ಯೋಜನೆಗಳ ಬಗ್ಗೆ ಮಾಹಿತಿ ಪ್ರಸಾರ ಮಾಡಿದ್ದಲ್ಲದೆ ಇಲಾಖೆ ಒದಗಿಸುತ್ತಿರುವ ಹಣಕಾಸು ಸೇವೆಗಳ ಬಗ್ಗೆ ಜನಮಾನಸದಲ್ಲಿ ಜಾಗೃತಿ ಮೂಡಿಸಿತು. ಮತ್ತು ಸ್ಥಳದಲ್ಲಿಯೇ ಅರ್ಹ ನಾಗರಿಕರಿಗೆ ತನ್ನ ಸೇವೆಗಳನ್ನು ವಿತರಿಸುವ ಮೂಲಕ ಅಭ್ಯುದಯದ ಪಥಕ್ಕೆ  ತನ್ನ ಕಟಿಬದ್ಧತೆಯನ್ನು ಸಾರಿತು.
ಕರ್ನಾಟಕ ಅಂಚೆ ಇಲಾಖೆಯು 1708 ಇಲಾಖಾ ಅಂಚೆ ಕಚೇರಿಗಳು ಮತ್ತು 7922 ಶಾಖಾ ಅಂಚೆ ಕಚೇರಿಗಳನ್ನು ಹೊಂದಿದೆ. ಉಳಿತಾಯ ಬ್ಯಾಂಕ್ ಮತ್ತು ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಮೂಲಕ ಡಿಜಿಟಲ್ ಸೇವೆಗಳನ್ನು ಕೇಂದ್ರೀಕರಿಸಿ ಅಂಚೆ ಕಚೇರಿ ಉಳಿತಾಯ ಬ್ಯಾಂಕ್ ಸೇವೆಗಳನ್ನು ಒದಗಿಸುತ್ತಿದೆ ಮತ್ತು ಆ ಮೂಲಕ ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಗಳು, ಹಲವಾರು ರಾಜ್ಯ ಮತ್ತು ಕೇಂದ್ರ ಸರ್ಕಾರದ ನೇರ ಲಾಭ ವರ್ಗಾವಣೆ (ನೇರ ನಗದು ವರ್ಗಾವಣೆ) ಯೋಜನೆಗಳನ್ನು ವಿತರಿಸುವಲ್ಲಿ ಅದು ಪ್ರಮುಖ ಪಾತ್ರ ವಹಿಸುತ್ತಿದೆ.   ಆಧಾರ್ ಕಡ್ಡಾಯ ನಿಯಮದೊಂದಿಗೆ ಪಿಎಂ ಕಿಸಾನ್ ಸಮ್ಮಾನ್ ಯೋಜನೆ, ಗೃಹ ಲಕ್ಷ್ಮಿ ಮುಂತಾದ ಯೋಜನೆಗಳಿಗೆ ನೇರ ನಗದು ವರ್ಗಾವಣೆಯ (ಡಿಬಿಟಿ) ಫಲಾನುಭವಿಗಳನ್ನು ಗುರುತಿಸುವುದಕ್ಕೆ ಇಲಾಖೆ ಸಹಾಯ ಮಾಡುತ್ತಿದೆ.  ಮಹಿಳಾ ಸಬಲೀಕರಣ ಉಪಕ್ರಮಗಳಡಿಯಲ್ಲಿ ಸುಕನ್ಯ ಸಮೃದ್ಧಿ ಖಾತೆಗಳನ್ನು (ಎಸ್ ಎಸ್.ಎ) ಆರಂಭಿಸಲು ಮತ್ತು ಮಹಿಳಾ  ಸಮ್ಮಾನ್  ಉಳಿತಾಯ ಪ್ರಮಾಣಪತ್ರ (ಎಂಎಸ್ಎಸ್ ಸಿ)ಗಳನ್ನು ಪಡೆಯಲು  ನೆರವಾಗುತ್ತಿದೆ  ಹಿರಿಯ ನಾಗರಿಕರ ಉಳಿತಾಯ ಯೋಜನೆ ಖಾತೆಗಳನ್ನು ತೆರೆಯಲು ಇಲಾಖೆ ಸಹಾಯ ಮಾಡುತ್ತದೆ. ಅಂಚೆ ಇಲಾಖೆಯು ಸಾರ್ವಜನಿಕ ಭವಿಷ್ಯ ನಿಧಿ ಖಾತೆಗಳನ್ನು (ಪಿಪಿಎಫ್) ತೆರೆಯಲೂ ನೆರವಾಗುತ್ತದೆ ಮತ್ತು ಪ್ರಧಾನ ಮಂತ್ರಿಗಳ ಯೋಜನೆಗಳ  ಪ್ರಚುರಪಡಿಸುವಿಕೆ ಜೊತೆಗೆ : ಪಿಎಂಎಸ್ ಬಿವೈ, ಪಿ.ಎಂ.ಜೆ.ಜೆ.ಬಿ.ವೈ, ಮತ್ತು ಪಿ.ಎಂ.ಎ.ಪಿ.ವೈ. ಯೋಜನೆಗಳಿಗೆ ಉತ್ತೇಜನ ನೀಡುತ್ತದೆ.
ಅಂಚೆ ಇಲಾಖೆಯು ಸಾಮಾಜಿಕ ಭದ್ರತಾ ಯೋಜನೆಗಳ ಅಂಗವಾಗಿರುವ ಗುಂಪು ಅಪಘಾತ ವಿಮಾ ಪಾಲಿಸಿಗಳ ಮಾರಾಟವನ್ನು ಉತ್ತೇಜಿಸುತ್ತಿದೆ ಮಾತ್ರವಲ್ಲ ಮನೆ ಬಾಗಿಲಿಗೆ ಬ್ಯಾಂಕಿಂಗ್ ಸೌಲಭ್ಯ (ಡೋರ್ ಸ್ಟೆಪ್ ಬ್ಯಾಂಕಿಂಗ್) ಕೊಂಡೊಯ್ಯುವ ಮೂಲಕ ಸೌಲಭ್ಯ ವಂಚಿತ ಪ್ರದೇಶಗಳ ಜನರಿಗೆ ಹಣಕಾಸು ಮತ್ತು ಬ್ಯಾಂಕಿಂಗ್ ಸೇವಾ ಸೌಲಭ್ಯವನ್ನು ಒದಗಿಸುತ್ತಿದೆ.

2023ರ ನವೆಂಬರ್ 15 ರಿಂದ 2024ರ ಜನವರಿ 26 ರವರೆಗೆ ನಡೆದ ವಿಕಸಿತ ಭಾರತ ಸಂಕಲ್ಪ ಯಾತ್ರೆಯಲ್ಲಿ ಕರ್ನಾಟಕ ವೃತ್ತದ ಅಂಚೆ ಇಲಾಖೆಯು ಸಕ್ರಿಯವಾಗಿ ಪಾಲ್ಗೊಂಡಿದೆ.  3 ವಲಯಗಳು ಮತ್ತು 31 ವಿಭಾಗಗಳಲ್ಲಿ ಸಮಗ್ರ ಔಟ್ರೀಚ್ ಕಾರ್ಯಕ್ರಮಗಳನು ನಡೆಸಿದೆ. ಈ ಯಾತ್ರೆಯಲ್ಲಿ 75,681 ಜನರು ಭಾಗವಹಿಸಿದ್ದರು, ಅಂಚೆ ಇಲಾಖೆಯ ಸ್ಟಾಲ್  ಸ್ಥಳದಲ್ಲೇ 9,136 ವಹಿವಾಟುಗಳನ್ನು ಯಶಸ್ವಿಯಾಗಿ ನಡೆಸಿ  ಹಣಕಾಸು ಸೇವೆಗಳ ವಿತರಣೆಯಲ್ಲಿ ತನ್ನ ಮಹತ್ವದ ತೊಡಗಿಸಿಕೊಳ್ಳುವಿಕೆಯನ್ನು ಎತ್ತಿ ತೋರಿಸಿದೆ. 5,650 ಪೋಸ್ಟ್ ಆಫೀಸ್ ಉಳಿತಾಯ ಬ್ಯಾಂಕ್ (ಪಿಒಎಸ್ಬಿ) ಖಾತೆಗಳನ್ನು ತೆರೆಯುವ ಮೂಲಕ ಅದು ಆರ್ಥಿಕ ಸೇರ್ಪಡೆಯನ್ನು ಉತ್ತೇಜಿಸಿದೆ. ಈ ವೇಳೆಯಲ್ಲಿ ಇಲಾಖೆ 340 ಸುಕನ್ಯಾ ಸಮೃದ್ಧಿ ಖಾತೆಗಳನ್ನು ತೆರೆಯಲು  ಮತ್ತು 350 ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರಗಳನ್ನು ನೀಡಲು  ಅನುಕೂಲತೆಗಳನ್ನು  ಮಾಡಿಕೊಟ್ಟಿತ್ತು.
ಅಂಚೆ ಇಲಾಖೆಯು ಮಹಿಳೆಯರ ಆರ್ಥಿಕ ಸೇರ್ಪಡೆಗೆ ವಿಶೇಷ  ಉತ್ತೇಜನ ನೀಡುತ್ತಿದೆ. ಯಾತ್ರೆ ಸಂದರ್ಭದಲ್ಲಿ 2,931 ಮಂದಿ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (ಐಪಿಪಿಬಿ) ಖಾತೆಗಳ ಸೌಲಭ್ಯವನ್ನು  ಪಡೆದುಕೊಂಡಿದ್ದಾರೆ.  ಆಧಾರ್ ಗೆ ಸಂಬಂಧಿಸಿ 5,109 ನವೀಕರಣಗಳನ್ನು ಮಾಡಲಾಗಿದೆ  ಮತ್ತು 414 ಹೊಸ ನೋಂದಣಿಗಳೊಂದಿಗೆ ಆಧಾರ್ ಸಂಬಂಧಿತ ಸೇವೆಗಳಲ್ಲಿ ಯಾತ್ರೆ ನಿರ್ಣಾಯಕ ಪಾತ್ರ ವಹಿಸಿದೆ. ಹೆಚ್ಚುವರಿಯಾಗಿ, ಪಿಂಚಣಿದಾರರಿಗೆ ಅವಶ್ಯವಾದ 254 ಡಿಜಿಟಲ್ ಲೈಫ್ ಸರ್ಟಿಫಿಕೇಟ್ ಗಳನ್ನು ವಿತರಿಸುವ ಮೂಲಕ ಹಿರಿಯ ನಾಗರಿಕರಿಗೆ ತನ್ನ ಸೇವಾ ಬದ್ಧತೆಯನ್ನು ಅದು ಪುನರುಚ್ಛರಿಸಿತು. ಹಾಗು  ಆ ಮೂಲಕ  ಆಡಳಿತಾತ್ಮಕ ಪ್ರಕ್ರಿಯೆಗಳನ್ನು ಸುವ್ಯವಸ್ಥಿತಗೊಳಿಸುವ ಇಲಾಖೆಯ ಬದ್ಧತೆಯನ್ನು ಪ್ರದರ್ಶಿಸಿತು. 434 ಇತರ ವಹಿವಾಟುಗಳೊಂದಿಗೆ, ವಿಕಸಿತ ಭಾರತ ಸಂಕಲ್ಪ ಯಾತ್ರೆಯಲ್ಲಿ ಅಂಚೆ ಇಲಾಖೆಯು  ಆರ್ಥಿಕ ಸಬಲೀಕರಣ ಮತ್ತು ಸರ್ವರನ್ನೂ ಒಳಗೊಳ್ಳುವ ಸ ಪ್ರತಿಪಾದಿಸಿತು.

Share this Article