ತುಂಗಭದ್ರಾ ನದಿ ತೀರದ ಗ್ರಾಮಗಳಿಗೆ ಶಾಸಕರಾದ ಲತಾ ಮಲ್ಲಿಕಾರ್ಜುನ ಭೇಟಿ

Kalabandhu Editor
1 Min Read

700ಕ್ಕೂ ಹೆಚ್ಚು ಎಕರೆ ಹೊಲಗಳ ಬೆಳೆಗಳಿಗೆ ನದಿ ನೀರು ನುಗ್ಗಿ ಹಾನಿ

ಅಗತ್ಯ ಬಿದ್ದರೆ ಕಾಳಜಿ ಕೇಂದ್ರ ತೆರೆದು ಪ್ರವಾಹ ಪರಿಸ್ಥಿತಿ ಎದುರಿಸಲು ಸಿದ್ಧತೆ ಮಾಡಿಕೊಳ್ಳುವಂತೆ ಸಂಬಂಧಿಸಿದ ನೋಡಲ್ ಅಧಿಕಾರಿಗಳಿಗೆ ಶಾಸಕರು ಸೂಚನೆ

ಹರಪನಹಳ್ಳಿ: ತಾಲೂಕಿನ ತುಂಗಭದ್ರಾ ನದಿ ತೀರದ ಗ್ರಾಮಗಳಿಗೆ ಶಾಸಕರಾದ ಎಂ.ಪಿ.ಲತಾ ಮಲ್ಲಿಕಾರ್ಜುನ್ ಭಾನುವಾರ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪ್ರವಾಹ ಪರಿಸ್ಥಿತಿ ವೀಕ್ಷಣೆ ಮಾಡಿದರು.

ಗರ್ಭಗುಡಿ, ಹಲುವಾಗಲು, ನಿಟ್ಟೂರು, ಕಡತಿ ಗ್ರಾಮಗಳಿಗೆ ಭೇಟಿ ನೀಡಿದ ಅವರು ನದಿ ತೀರದ ಗ್ರಾಮಗಳ ಜನರಿಗೆ ಎಚ್ಚರಿಕೆಯಿಂದ ಇರುವಂತೆ ಟಾಂಟಾಂ ಹೊಡಿಸಿ, ಅಗತ್ಯ ಬಿದ್ದರೆ ಕಾಳಜಿ ಕೇಂದ್ರ ತೆರೆದು ಪ್ರವಾಹ ಪರಿಸ್ಥಿತಿ ಎದುರಿಸಲು ಸಿದ್ಧತೆ ಮಾಡಿಕೊಳ್ಳುವಂತೆ ಸಂಬಂಧಿಸಿದ ನೋಡಲ್ ಅಧಿಕಾರಿಗಳಿಗೆ ಶಾಸಕರು ಸೂಚನೆ ನೀಡಿದರು.

ಗರ್ಭಗುಡಿ-ಹಲುವಾಗಲು ಗ್ರಾಮಗಳ ರಸ್ತೆ ಎರಡು ಕಡೆ ಬಂದ್ ಆಗಿದ್ದು ರಸ್ತೆ ಎತ್ತರಿಸಲು
ಕ್ರಿಯಾಯೋಜನೆ ರೂಪಿಸುವಂತೆ ಲೋಕೋಪಯೋಗಿ ಇಲಾಖೆ ಎಇಇ ಅವರಿಗೆ ಶಾಸಕರು ಸೂಚಿಸಿದರು.

ಮಳೆಯಿಂದ ಹಾನಿಗೀಡಾದ ಬೆಳೆಗಳನ್ನು ಪರಿಶೀಲಿಸಿ ಸೂಕ್ತ ಪರಿಹಾರ ಸಿಗುವ ಹಾಗೆ
ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಕೃಷಿ, ತೋಟಗಾರಿಕಾ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ತುಂಗಭದ್ರಾ ನದಿ ಉಕ್ಕಿ ಹರಿದ ಪರಿಣಾಮ ಅಂದಾಜು 700 ಎಕರೆ ಬೆಳೆ ಹಾನಿ ಸಂಭವಿಸಿದ್ದು, ತಾವರಗೊಂದಿಯಲ್ಲಿ 250 ಎಕರೆ ಭತ್ತ, ನಂದ್ಯಾಲ ಗ್ರಾಮದಲ್ಲಿ 200 ಎಕರೆ ಭತ್ತ, ತೆಂಗು, ಅಡಿಕೆ, ನಿಟ್ಟೂರು ಬಸ್ಸಾಪುರ ಗ್ರಾಮದಲ್ಲಿ 150-200 ಎಕರೆ ಭತ್ತ ಹೀಗೆ ಅಂದಾಜು 700ಕ್ಕೂ ಹೆಚ್ಚು ಎಕರೆ ಹೊಲಗಳ ಬೆಳೆಗಳಿಗೆ ನದಿ ನೀರು ನುಗ್ಗಿ ಹಾನಿ ಸಂಭವಿಸಿದೆ ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಉಪ ವಿಭಾಗಾಧಿಕಾರಿ ಗುರುಸ್ವಾಮಿ, ಚಿದಾನಂದ ತಹಶೀಲ್ದಾರ್ ಬಿ.ವಿ.ಗಿರೀಶಬಾಬು, ತಾಲ್ಲೂಕು ಪಂಚಾಯತಿ ಇಒ ಚಂದ್ರಶೇಖರ, ಸಹಾಯಕ ಕೃಷಿ ನಿರ್ದೇಶಕ ಉಮೇಶ, ಬಿಇಒ ಬಸವರಾಜಪ್ಪ, ಪುರಸಭಾ ಮುಖ್ಯಾಧಿಕಾರಿ ಎರಗುಡಿ ಶಿವಕುಮಾರ, ತೋಟಗಾರಿಕೆ ಅಧಿಕಾರಿ ರವೀಂದ್ರ ಹಿರೇಮಠ, ಮತ್ತೂರು ಬಸವರಾಜ, ಶಿವರಾಜ ಸೇರಿದಂತೆ ಮತ್ತಿತರ ಮುಖಂಡರು ಇದ್ದರು.

Share this Article