ಅಭಿವೃದ್ಧಿಶೀಲ ರಾಷ್ಟ್ರಗಳ ಸಾಲ ಯೋಜನೆ ಕುರಿತು ಸೂಕ್ತ ವೇದಿಕೆಗಳಲ್ಲಿ ಚರ್ಚೆ
ಬೆಂಗಳೂರು, ಸೆಪ್ಟೆಂಬರ್ 11 (ಕರ್ನಾಟಕ ವಾರ್ತೆ):
ಎರಡು ದಿನಗಳ ಬೆಂಗಳೂರು ಪ್ರವಾಸ ಕೈಗೊಂಡಿರುವ ನೆದರ್ಲ್ಯಾಂಡ್ಸ್ ದೇಶದ ಪ್ರಧಾನಿ ಮಾರ್ಕ್ ರುಟ್ಟೆ ಅವರು, ಭಾರತ ಹಾಗೂ ನೆದರ್ಲ್ಯಾಂಡ್ಸ್ ರಾಷ್ಟ್ರಗಳು ಪ್ರಜಾಪ್ರಭುತ್ವ ವ್ಯವಸ್ಥೆಗೆ ತೆರೆದುಕೊಂಡು 75 ವರ್ಷಗಳಾಗಿರುವ ಸಂದರ್ಭದ ಸವಿನೆನಪಿಗಾಗಿ ನಗರದ ಚರ್ಚ್ ಸ್ಟ್ರೀಟ್ನಲ್ಲಿ ಇಂದು ಸಂಚರಿಸಿ, ಚಹಾ ಸವಿದರು.
ಬ್ರಿಗೇಡ್ ರಸ್ತೆಯಿಂದ ಕಾಲ್ನಡಿಗೆ ಮೂಲಕ ಚರ್ಚ್ ಸ್ಟ್ರೀಟಿನ ಚಾಯ್ಪಾಯಿಂಟ್ಗೆ ಆಗಮಿಸಿ, ಮಸಾಲಾ ಚಹ ಖರೀದಿಸಿ ಸವಿದು,ಯುಪಿಐ ಮೂಲಕ ಹಣ ಪಾವತಿ ಮಾಡಿದರು. ಬಳಿಕ ತಮ್ಮ ಸಂಗಡಿಗರೊಂದಿಗೆ ಲೋಕಾಭಿರಾಮವಾಗಿ ಮಾತನಾಡುತ್ತ ಚರ್ಚ್ ಸ್ಟ್ರೀಟಿನ ಬೇರಿ ಸರ್ಕಲ್ವರೆಗೆ ಕಾಲ್ನಡಿಗೆಯಲ್ಲಿಯೇ ಬಂದರು. ತಕ್ಷಶಿಲಾ ಇನ್ಸ್ಟಿಟ್ಯೂಷನ್ ಗೋಡೆಯ ಮೇಲೆ ಭಾರತ ಹಾಗೂ ನೆದರ್ಲ್ಯಾಂಡ್ಸ್ ದ್ಯೋತಕವಾಗಿ ಬರೆಯಲಾಗಿರುವ ಸಿಂಹ (ಒuಡಿಚಿಟ) ದ ವರ್ಣಚಿತ್ರ ವೀಕ್ಷಿಸಿ ಸಂತಸ ವ್ಯಕ್ತಪಡಿಸಿದರು.




ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಭಾರತದ ಡಿಜಿಟಲ್ ಪಾವತಿಯ ಯುಪಿಐ ವಿಧಾನವು ಸರಳ ಹಾಗೂ ಸುಲಭವಾಗಿದೆ. ಇಲ್ಲಿನ ಚರ್ಚ್ಸ್ಟ್ರೀಟಿನಲ್ಲಿ ಸಂಚರಿಸಿ ಚಹ ಸವಿದಿರುವುದು ಸಂತಸ ತಂದಿದೆ. ಕೆಳ ಮತ್ತು ಮಧ್ಯಮ ಆದಾಯ ಹೊಂದಿರುವ ರಾಷ್ಟ್ರಗಳ ಸಾಲ ಯೋಜನೆ ಕುರಿತು ಸೂಕ್ತ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಚರ್ಚಿಸಿ ಹಂತ ಹಂತವಾಗಿ ದೀರ್ಘಾವಧಿಯ ಕಾರ್ಯಕ್ರಮಗಳನ್ನು ಅನುμÁ್ಠನಗೊಳಿಸಲಾಗುವುದು. ಜಿ20 ಯ ನವದೆಹಲಿ ಘೋಷಣೆಗೆ ತಮ್ಮ ಸಂಪೂರ್ಣ ಸಹಮತವಿದೆ ಎಂದ ಅವರು, ಕರ್ನಾಟಕದ ಭೇಟಿ ಸಂದರ್ಭದಲ್ಲಿ ಇಲ್ಲಿನ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಯವರು ತೋರಿದ ಕಾಳಜಿಯ ಬಗ್ಗೆಯೂ ಪ್ರಶಂಸೆ ವ್ಯಕ್ತಪಡಿಸಿದರು.
ಜನರೊಂದಿಗೆ ಸರಳವಾಗಿ ಬೆರೆತ ಪ್ರಧಾನಿ:ಸಾರ್ವಜನಿಕರೊಂದಿಗೆ ಸೆಲ್ಫಿ
ಸರಳ ಭದ್ರತೆಯ ನಡುವೆ ಯಾವುದೇ ಹೆಚ್ಚು ಅಂತರಗಳನ್ನಿಟ್ಟುಕೊಳ್ಳದೇ ಸಾರ್ವಜನಿಕರು ಹಾಗೂ ಮಾಧ್ಯಮದವರೊಂದಿಗೆ ಬೆರೆತ ನೆದರ್ಲ್ಯಾಂಡ್ಸ್ ಪ್ರಧಾನಿ ಮಾರ್ಕ್ ರುಟ್ಟೆ ಅವರು, ಜನರ ಬಳಿ ತೆರಳಿ ಕೈ ಕುಲುಕಿದರು. ಚಿಕ್ಕ ಮಗುವೊಂದನ್ನು ಕಂಡು ಖುಷಿಯಾದ ಅವರು ಮಗುವಿನತ್ತ ವಿಶೇಷ ಪ್ರೀತಿ ಸೂಚಿಸಿದರು. ತಮ್ಮೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಬಂದ ಸಾರ್ವಜನಿಕರೊಂದಿಗೆ ಬೆರೆತು ತಾವೇ ಖುದ್ದಾಗಿ ಜನರ ಮೊಬೈಲುಗಳಲ್ಲಿ ಸೆಲ್ಫಿ ತೆಗೆದುಕೊಟ್ಟರು.
ಈ ಸಂದರ್ಭದಲ್ಲಿ ಶಾಸಕ ಎನ್. ಎ.ಹ್ಯಾರಿಸ್ ಮತ್ತಿತರ ಗಣ್ಯರು ಜೊತೆಗಿದ್ದರು.
ಈ ಸಂದರ್ಭದಲ್ಲಿ ಶಾಸಕ ಎನ್. ಎ.ಹ್ಯಾರಿಸ್ ಮತ್ತಿತರ ಗಣ್ಯರು ಜೊತೆಗಿದ್ದರು.