ಮುಂಬೈ: ಮಹಾರಾಷ್ಟ್ರದ ಮರಾಠಿ ನೆಲದಲ್ಲಿ ಕನ್ನಡ ಪತ್ರಿಕೆಗಳನ್ನು ನಡೆಸುವ ಮೂಲಕ ಕನ್ನಡ ಭಾಷೆ ಉಳಿಸಿ ಬೆಳೆಸಲು ತಮ್ಮದೇ ಆದ ಕೊಡುಗೆ ನೀಡುತ್ತಿರುವ ಕನ್ನಡಿಗರ ಸೇವೆ ಶ್ಲಾಘನೀಯವಾಗಿದೆ ಎಂದು ಕರ್ನಾಟಕ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ತಿಳಿಸಿದರು.
ಮುಂಬಯಿಯಲ್ಲಿ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ. ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಕೆ.ಟಿ.ವೇಣುಗೋಪಾಲ್ ಹೆಸರಿನ ಮಾಧ್ಯಮ ಪ್ರಶಸ್ತಿ ವಿತರಣೆ ಮಾಡಿ ಮಾತನಾಡಿದರು.
ಹೊರನಾಡಿನಲ್ಲಿ ಕನ್ನಡ ಪತ್ರಿಕೆಗಳನ್ನು ಹುಟ್ಟುಹಾಕುವುದು ಯಶಸ್ವಿಯಾಗಿ ನಡೆಸುವುದು ಬಹಳ ಸವಾಲಿನದ್ದು. ಈ ಸವಾಲನ್ನು ಕನ್ನಡ ಪತ್ರಕರ್ತರ ಸಂಘ ಮಹಾರಾಷ್ಟ್ರ(ಕಪಸಮ) ಯಶಸ್ವಿಯಾಗಿ ನಿಭಾಯಿಸಿದೆ ಎಂದರು.
ಆಧುನಿಕ ತಂತ್ರಜ್ಞಾನ ಮಾಹಿತಿ ಜಗತ್ತು ಮತ್ತು ಪತ್ರಿಕಾ ವೃತ್ತಿಗೆ ವ್ಯಾಪಕ ಅವಕಾಶಗಳನ್ನು ತೆರೆದಿಟ್ಟಿದೆ. ಆದರೆ ಪತ್ರಕರ್ತರ ಬದುಕು ಮಾತ್ರ ಸಮಸ್ಯೆಗಳಲ್ಲೇ ಮುಳುಗಿದೆ. ಸಮಸ್ಯೆಗೆ ಸ್ಪಂಧಿಸುವ ನಿಟ್ಟಿನಲ್ಲಿ ಸರ್ಕಾರ ಪ್ರಯತ್ನ ಮಾಡುತ್ತಿದೆ ಎಂದರು. ಮುಂಬೈ ಕನ್ನಡಿಗ ಪತ್ರಕರ್ತರ ಭವನಕ್ಕೆ ರಾಜ್ಯ ಸರ್ಕಾರದಿಂದ ನೆರವು ಕೊಡಿಸಲಾಗುವುದು ಎಂದು ಭವರಸೆ ನೀಡಿದರು.
ರಾಜ್ಯ ಸಮ್ಮೇಳನಕ್ಕೆ ಆಹ್ವಾನ
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶಿವಾನಂದ ತಗಡೂರು ಮಾತನಾಡಿ, ಮಹಾರಾಷ್ಟ್ರ ಪತ್ರಿಕೋದ್ಯಮಕ್ಕೆ ಕನ್ನಡಿಗರು ನೀಡಿರುವ ಕೊಡುಗೆ ಅಪಾರ. ಕನ್ನಡಿಗರ ಧ್ವನಿಯಾಗಿ ಇಲ್ಲಿನ ಪತ್ರಕರ್ತರು ಗಟ್ಟಿಯಾಗಿ ನಿಂತು ಮಾಡಿರುವ ಸೇವೆಯೂ ಅನನ್ಯ ಎಂದರು.
ಕೆಯುಡಬ್ಲೂೃಜೆ ಸಂಘಟಿಸುವ ರಾಜ್ಯ ಪತ್ರಕರ್ತರ ಸಮ್ಮೇಳನಕ್ಕೆ ಮುಂಬೈ ಪತ್ರಕರ್ತರನ್ನೂ ಆಹ್ವಾನಿಸಲಾಗುವುದು ಎಂದ ಅವರು, ಕನ್ನಡ ಪತ್ರಕರ್ತರ ಸಂಘವನ್ನು ಕಟ್ಟಿ ಬೆಳೆಸುತ್ತಿರುವ ಪತ್ರಕರ್ತರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.
ಕೆಯುಡಬ್ಲೂೃಜೆ ಸೇವೆ ಶ್ಲಾಘನೀಯ
ಪ್ರಶಸ್ತಿ ಪುರಸ್ಕೃತರಾದ ಹಿರಿಯ ಪತ್ರಕರ್ತರಾದ ಸನತ್ ಕುಮಾರ್ ಬೆಳಗಲಿ ಅವರು ಮಾತನಾಡಿ, ಮರಾಠಿ ನೆಲದಲ್ಲಿ ನನ್ನಂತ ಕನ್ನಡ ಪತ್ರಕರ್ತನ ಸೇವೆಯನ್ನು ಗುರುತಿಸಿ ಗೌರವಿಸುತ್ತಿರುವುದು ಅಭಿಮಾನದ ಸಂಗತಿ. ಕರ್ನಾಟಕದಲ್ಲಿ ಶಿವಾನಂದ ಅವರ ನೇತೃತ್ವದಲ್ಲಿ ಕೆಯುಡಬ್ಲೂೃಜೆ ಉತ್ತಮ ಕೆಲಸ ಮಾಡುತ್ತಿದ್ದು, ಪತ್ರಕರ್ತರ ಸಮಸ್ಯೆಗೆ ಸದಾ ಸ್ಪಂದಿಸುವ ಮೂಲಕ ಹೊಸ ಭರವಸೆ ಮೂಡಿಸಿದೆ ಎಂದು ಹೇಳಿದರು.
ಮುಂಬೈ ಬಂಟ್ಸ್ ಸಂಘದ ಅಧ್ಯಕ್ಷರಾದ ಚಂದ್ರಹಾಸ ಶೆಟ್ಟಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಾ.ಸುನಿತಾ ಎಂ ಶೆಟ್ಟಿ, ಜಯ ಶ್ರೀಕೃಷ್ಣ ಪರಿಸರ ಸಮಿತಿ ಅಧ್ಯಕ್ಷ ಎಲ್.ವಿ.ಅಮೀನ್ ಹಾಜರಿದ್ದರು. ಕಪಸಮ ಅಧ್ಯಕ್ಷರಾದ ರೋನ್ಸ್ ಬಂಟ್ವಾಳ್ ಅಧ್ಯಕ್ಷತೆ ವಹಿಸಿದ್ದರು.
ಹಿರಿಯ ಪತ್ರಕರ್ತರಾದ ಸನತ್ ಕುಮಾರ್ ಬೆಳಗಲಿ, ಲಾರೆನ್ಸ್ ಸೀಲೋ ಅವರಿಗೆ ರಾಷ್ಟ್ರೀಯ ಮಾಧ್ಯಮ ಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು. ಇದೇ ಸಂದರ್ಭದಲ್ಲಿ ರೋಹಿಣಿ ಸಾಲ್ಯಾನ್ ಅವರ ದಿವ್ಯಾಂಗನೆ ಕವನ ಸಂಕಲನ ಬಿಡುಗಡೆಗೊಳಿಸಿದರು.