‘ಸಮಾಜದ ನಾಲ್ಕನೆಯ ಸ್ತಂಭವಾದ ಪತ್ರಿಕಾರಂಗದಲ್ಲಿ ಇಂದು ಪತ್ರಕರ್ತರು ಅನೇಕ ಸವಾಲುಗಳನ್ನು ಎದುರಿಸಬೇಕಿದೆ. ಮಾಧ್ಯಮದಲ್ಲಿ ಹೇಳಿಕೊಳ್ಳುವಂಥ ಅವಕಾಶಗಳೇನೂ ಇಲ್ಲದಿದ್ದರೂ, ಸಮಾಜದ ತಳ ಸಮುದಾಯದ ಬಗ್ಗೆ ಕಾಳಜಿ, ಹಿತಕರ ಚಿಂತನೆ, ಜವಾಬ್ದಾರಿಯುತ ದೃಷ್ಟಿಯಿಂದ, ಕಿರಿಯ ಪತ್ರಕರ್ತರು ಮನಃಪೂರ್ವಕವಾಗಿ ತೊಡಗಿಕೊಳ್ಳುವಂತಾಗಲಿ, ಕಿರಿಯ ಪತ್ರಕರ್ತರು ಸಮಾಜದ ಒಳಿತಿಗೆ ಕೆಲಸ ಮಾಡುವ ಸದಾಶಯವನ್ನು ಇಟ್ಟುಕೊಳ್ಳಬೇಕು’ – ಎಂದು ಹಿರಿಯ ಪತ್ರಕರ್ತೆ ಡಾ. ಆರ್. ಪೂರ್ಣಿಮಾ ಕಿವಿಮಾತು ಹೇಳಿದರು..
ಅವರು ಇಂದು, ಕರ್ನಾಟಕ ಲೇಖಕಿಯರ ಸಂಘ, ನ್ಯಾಷನಲ್ ಪ್ರಥಮ ದರ್ಜೆ ಕಾಲೇಜಿನ ಸಂಯುಕ್ತಾಶ್ರಾಯದಲ್ಲಿ ನ್ಯಾಷನಲ್ ಕಾಲೇಜಿನ ಮಲ್ಟಿ ಮೀಡಿಯಾ ಹಾಲಿನಲ್ಲಿ ಏರ್ಪಡಿಸಿದ್ದ ‘ನಾಗಮಣಿ ಎಸ್. ರಾವ್. ದತ್ತಿನಿಧಿ ಪ್ರಶಸ್ತಿ’ ಸಮಾರಂಭದಲ್ಲಿ ಪ್ರಥಮ ಪ್ರಶಸ್ತಿಯನ್ನು ಸ್ವೀಕರಿಸಿದ ಹಿರಿಯ ಪತ್ರಕರ್ತೆ ಮತ್ತು ಲೇಖಕಿ ಪೂರ್ಣಿಮಾ ಮಾತನಾಡುತ್ತಿದ್ದರು. ನಾಡೋಜ ಪ್ರೊ. ಕಮಲಾ ಹಂಪನಾ ಪ್ರಶಸ್ತಿ ಪ್ರದಾನ ಮಾಡಿದರು. ಕಾರ್ಯಕ್ರಮದಲ್ಲಿ ‘ಪತ್ರಿಕೆಗಳಲ್ಲಿ ಸಾಹಿತ್ಯದ ಪಾತ್ರ, ಅಂದು-ಇಂದು ಎಂಬ ವಿಷಯದ ಬಗ್ಗೆ ಪ್ರಜಾವಾಣಿಯ ಕಾರ್ಯ ನಿರ್ವಾಹಕ ಸಂಪಾದಕರಾದ ಶ್ರೀ ರವೀಂದ್ರ ಭಟ್ಟ ಮತ್ತು ‘ಪತ್ರಿಕೋದ್ಯಮದಲ್ಲಿ ಅವಕಾಶಗಳು ಮತ್ತು ಸವಾಲುಗಳು’ ಎಂಬ ವಿಷಯದ ಬಗ್ಗೆ ನ್ಯಾಷನಲ್ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕರಾದ ಶ್ರೀ ಮೋಹನಬಾಬು ಉಪನ್ಯಾಸ ನೀಡಿದರು. ಮುಖ್ಯ ಅತಿಥಿಗಳಾಗಿ ನ್ಯಾಷನಲ್ ಕಾಲೇಜಿನ ಅಧ್ಯಕ್ಷ- ಡಾ. ಹೆಚ್.ಎನ್. ಸುಬ್ರಮಣ್ಯ, ಇಸ್ತೂರಿ ಸುಧಾಕರ್, ಕಮಲಾ ವೈ.ಸಿ ಮತ್ತು ನಾಗಮಣಿ ರಾವ್ ಹಾಗೂ ಲೇಖಕಿಯರ ಸಂಘದ ಅಧ್ಯಕ್ಷೆ ಹೆಚ್.ಎಲ್. ಪುಷ್ಪಾ ಉಪಸ್ಥಿತರಿದ್ದರು.
ಪತ್ರಕರ್ತರಿಗೆ ಸಮಾಜದ ಒಳಿತಿನ ಸದಾಶಯವಿರಲಿ – ಹಿರಿಯ ಪತ್ರಕರ್ತೆ ಆರ್. ಪೂರ್ಣಿಮಾ
RELATED ARTICLES